1.
ಸಾಗರ ತೀರವು ಸೇರಿದೆ ಈಗ
ನಡೆಯುತ ಹೋಗು ನೀ ಮುಂದೆ
ಹಾಯಿ ದೋಣಿಯ ನಾವಿಕ ನಾನು
ಹೋಗುವೆ ಸಾಗರದಿಂದೆ
ಕಾದಿಹ ಸೂರ್ಯನು ಮುಳುಗಿಹನೀಗ
ಕೆಂಪಿದೆ ಪಡುವಣ ಆತನದು
ಮನಸಿನ ಚಂದ್ರಮ ಎಲ್ಲೋ ಹೋಗಿರೆ
ಕಪ್ಪಗೆ ಕರಗಿದೆ ಮೋಹವದು
ಮನದಲಿ ಓಡಿದೆ ಅಲೆಗಳ ಓಟ
ನಿನ್ನಯ ಹೆಸರನು ಹೇಳುತಲಿ
ತೀರದ ಮೇಲಣ ನಡೆಯದು ದೋಣಿ
ಸಾಗರವದರದು ಎಂದು ಕಲಿ.
೨.
ಅಷ್ಟ ವರ್ಣಗಳ ಕಾಮನಬಿಲ್ಲು !!
ಹೇಗಾದರೂ ನೀ ಓಟದಿ ಗೆಲ್ಲು !
ಮೊದಲಿನ ಮೂರನು ದಾಟಿದೆ ನಾನು
ಮುರಿಯದೆ ಯಂತ್ರ ಬಿಚ್ಚದೆ ಗಾಲಿ
ನಾಲ್ಕನೆ ಬಾರಿ ಎಳೆದೇ ಬಿಟ್ಟಿತು
ಎಂದೂ ಕಾಣದ ಬೇಲಿ
ದಾಟಿಯೆ ಬಿಟ್ಟೆ ದಾಟಿಯೆ ಬಿಟ್ಟೆ
ಕಾಮನಬಿಲ್ಲಿನ ಸಪ್ತ ವರ್ಣ
ನೇರ ಮಾರ್ಗದಿ ಮುರಿದೇ ಹೋದರೂ
ಪ್ರದಕ್ಷಿಣ ಪಥದಲಿ ಜೋಡಿಸಿ ಇಟ್ಟೆ
ಕೆನೆಯಿತು ಮನದಲಿ ಅಪಹಾಸ್ಯದ ಕುದುರೆ
ಕುಡಿಸಿದೆ ಅದಕೆ ಆನಂದದ ಮದಿರೆ
ಓಟದಿ ಬೇಕು ಏಳು ಬೀಳು
ಆಟದಿ ಇಲ್ಲ ಮೇಲು ಕೀಳು ...!!
೩.
ಪಾರಿಜಾತವು ಹೇಳಿತು ನನಗೆ
ಶ್ರೀಕೃಷ್ಣನ ಪ್ರೇಮದ ಪರಿಯ
ಭಾಮೆಯು ನಡೆದಳು ಬಿಸಿಲಲ್ಲಿ
ಸೂರ್ಯನು ಕರಗಿದ ಮೋಡದಲಿ
ಅದು ಆತನ ಪ್ರೀತಿಯ ಭಾಷೆ
ರುಕ್ಮಿಣಿಯರ್ಪಿತ ತುಳಸಿಯದು
ತೂಗಿತು ಆತನ ತನುವನ್ನು
ಅದು ಆತನ ಪ್ರೀತಿಯ ರೀತಿ
ಮುಗಿಸಿದನಾತನು ನರಕಾಸುರನ
ಶರಣಾದರು ಎಲ್ಲ ಬಂದಿಗಳು
ಸ್ವೀಕರಿಸಿದನವನು ಎಲ್ಲರನು
ಹದಿನಾರುಸಾವಿರ ಸ್ತ್ರೀಯರನು
ಈತನೆ ಕರಗುವ ಮನಸಿನ ಹರಿ
ಪಾಂಚಾಲಿ ಕರೆದಳು ಸಭೆಯಲ್ಲಿ
ನೀರೆಗೆ ನೀಡಿದ ಸೀರೆಯನು
ಅದು ಆತನ ವಾತ್ಸಲ್ಯದ ಧಾರೆ
ಕೊನೆಯಲಿ ಹೇಳಿತು ಸೌರಭ ಸಾರ
ಇದನೆಲ್ಲವ ನಾ ನೋಡಿದರಿಂದಲೆ
ಶಾಶ್ವತವಾಗಿಹೆ ಭೂಮಿಯಲಿ
೪.
ಗೆಳೆತಿ ನೀನು ಹೋದೆಯೆತ್ತ
ಹುಡುಕುತಿರುವೆ ಜಾಡು
ನೀನಾಡಿದ ಹೃದಯವಿಂದು
ಬರಿಯ ಎಲುಬು ಗೂಡು
ನೀ ಮೀಟಿದ ವೀಣೆಯಿಂದು
ಶಬ್ದವಿರದ ಹಾಡು
ನೀ ನಡೆದಿಹ ಕಾಡದೀಗ
ಬರಿಯ ಮರಳುಗಾಡು
ನನ್ನ ಎಲ್ಲ ನಿನ್ನೆಗಳನು
ಬರೆದೆ ನೀನು ನೋಡು
ನನ್ನ ಮನದ ಒಳಗೆ ನೀನು
ನದಿಯ ತೆರದಿ ಹಾರಿದೆ ಹರಿದೆ
ಮನದ ಭಿತ್ತಿ ಭಿತ್ತಿಯಲ್ಲೂ
ನಿನ್ನ ಚಿತ್ರ ಬರೆದೆ
ನೀ ಹರಿದಿಹ ಹಾದಿಯಲ್ಲಿ
ಮರಳು ಏಕೆ ಸುರಿದೆ ?
ನಿನ್ನ ಎಲ್ಲ ಚಿತ್ರಗಳಲಿ
ಕಪ್ಪಗಿಯೆ ಉಳಿದೆ
೫.
ನಕ್ಕೆ ಏಕೆ ಅಂದು ನೀನು ಹೇಳಿ ನಿನ್ನ ಹೆಸರು
ಅರಿಯದಂತೆ ಹೃದಯ ತುಂಬ ನಿನ್ನ ಹೆಸರ ಹಸಿರು
ಮರೆತೂ ಮುಂದೆ ಹೋಗದಿರು ನಿಲ್ಲಬಹುದು ಉಸಿರು
ನಗುತ ಈಗ ಕೇಳದಿರು ಪ್ರಶ್ನೆಗಳನು ಕೆಲವು
ಮರೆಯುತಿಹೆನು ನಿನ್ನ ನೋಡಿ ಕಷ್ಟಗಳನು ಹಲವು
೬.
ಇರಲೆ ಬೇಕು ನಿನಗೂ ಒಬ್ಬ ಇದ್ದೂ ಇರದ ಕುಚೇಲ
ಎಂದು ನೀನು ಬರುವೆಯಿತ್ತ ಎನುತ ಕಾವ ಸುಶೀಲ
ಹಸಿವು ತನ್ನದು, ಪ್ರೀತಿ ನಿನ್ನದು, ನಗುತ ಜಗವ ಮರೆಯುವ
ಜತೆಯಲಿರಲು ನೀನು ನನ್ನ, ಇಂದ್ರ ಕದವ ತೆರೆಯುವ
ಇರಲು ಬಹುದು ಜಗಕೆ ಎಲ್ಲ ದೊರೆಯು ನೀನು ಇಂದು
ಆಟವಾಡಿ ಜಗವ ನೋಡಿ ನಗುತಲಿದ್ದೆವಂದು
ಅಶನವಿದೆ ಹಿಡಿಯಲಿಷ್ಟು ಬಾ ನಿನಗೆ ಎಂದು
ಜಗವು ಜೊತೆಯಲಿರದಿರೇನು ನೀನೆ ಎನಗೆ ಬಂಧು
ಬೇಕು ಎಂದು ಬೇಡಲಿಲ್ಲ ಮದಿರೆ ಹೊನ್ನು ಮಣ್ಣು
ಕಾಣಬೇಕು ಗೋಪ ಎನಗೆ ನಗುವ ನಿನ್ನ ಕಣ್ಣು
ಕುಡಿಯಬೇಕು ಬಡವನಲ್ಲಿ ನಗುತ ಎರಡು ಬಿಂದು
ಅಷ್ಟಾದರೆ ದೊರಕಿತೆನಗೆ ನಗಲು ಸುಖದ ಸಿಂಧು
೭.
ನಗುತಿಹುದು ವಿಧಿ ಇಂದು ಒಂಟಿ ನೀನಹುದೆಂದು
ಮನವಿಹುದು ಧೃತಿಗೆಡದೆ ಗಂಟು ಬಿಡಿಸುವೆನೆಂದು
ಮರುಗಿದರೆ ಏನಿಹುದು ವಿರಹ ಮದಿರೆಯ ಕುಡಿದು
ಬರಹವದು ಆತನದು ದೂರ ನಿಂತರೂ ಬಿಡದು
ನಗುತಿರಲು ನೀನಿಂದು ಬದುಕು ನಿನ್ನದು ಎಂದು
ಕಾದಿಹುದು ನಿನಗೆಂದು ಅವನೆ ಕಳಿಸಿದ ಬಿಂದು
ಅಮೃತವದು ಸುರಿಯುವುದು ಎನುತ ಕಾದರೆ ಇಂದು
ಉರಿದಿಹುದು ಸೌಭಾಗ್ಯ ಸುಡುವ ಬಿಸಿಲಲಿ ಬೆಂದು
ನಡೆಯುತಿರು ನಡೆಯುತಿರು ಗುರಿಯ ಸೇರುವ ತನಕ
ಸಮಯವನು ಸೇರಿಸದು ಗೆರೆಯ ದಾಟುವ ತವಕ
ಮನದೊಳಗೆ ತುಂಬಿರಲು ನಾಳೆ ಕಾಯುವ ಜತನ
ಸಿಗದಿರದೆ ನಿನಗೆಂದೆ ಹರಿಯಿತ್ತ ಪತನ
೮.ಕ್ಷಮೆ ಇರಲಿ
ಮಳೆ ಬಂದರೇ ಬರಲಾಗದು ಗೆಳತೀ ಇರೂ ಅಳದೇ
ಪ್ರತಿ ವಾರವೂ ಸಿಗಲಾಗದು ನಗುತಾ ಇರೂ ಇರೂ
ಯಾರನೂ ದೂರಲಿ ಮಳೆಯದು ಬರುತಿರುವಾಗ
ನಗುತಲೇ ನಿಲ್ಲಲಿ ಹೇಗೆ ಈಗ
ನೆನೆಯುವುದೂ ಈಗ ನೆನೆಯುವುದೂ ಈ ಹನಿಗಳಲಿ ಇದು ಸಾಧ್ಯಾನಾ
ಮಳೆಯೊಳಗೇ ನಿನ ಕಾಣುವುದೇ ನಗು ಅರಸುವುದೇ ನಿಜ ಪ್ರೀತೀನಾ
ಯಾಕೆ ಮರೆತು ಬಿಟ್ಟೆನಾ ನೀನು ಕೊಟ್ಟ ಛತ್ರಿಯೊಂದನು
ನಮ್ಮ ಪ್ರೇಮಚಂದ್ರಗೇ ನಾನೆ ಕಪ್ಪು ಮೋಡವಾದೆನೆ
ಪ್ರತಿ ಉಸಿರಲಿ ಹೇಳಿದ ಹೆಸರಾ ಮಳೆ ನಿಲ್ಲಿಸಿತೊಮ್ಮೆಲೆ ಈಗ
ಜತೆ ಇರದಿಹ ಒಂಟಿಯು ನಾನು ಏನು ಮಾಡಲೀ
ನೆನೆಯುವುದೂ ಈ ಹನಿಗಳಲಿ ಇದು ಸಾಧ್ಯಾನಾ
ಮಳೆಯೊಳಗೇ ನಿನ ಕಾಣುವುದೇ ನಗು ಅರಸುವುದೇ ನಿಜ ಪ್ರೀತೀನಾ
ಇನ್ನು ಮುಂದೆ ನಗುವಿಗೆ ಇಲ್ಲ ಒಂದರ ಒಂದು ಕಾರಣ
ಛತ್ರಿ ಇದ್ದು ನೆನೆಯುವಂತೆಯೇ ಅನಿಸಿತೇಕೆ ಇಂದು ಈ ದಿನ
ನಿನ ನೆನಪಲಿ ಇರುವೆನು ನಾನು ನಗುನಗುತಲಿ ಬಾಳುವೆಯೇನು
ನೀನಿಲ್ಲದ ಉಸಿರಿಹುದೇನು ನಾನು ಬಾಳೆನೂ
ನೆನೆಯುವುದೂ ಈ ಹನಿಗಳಲಿ ಇದು ಸಾಧ್ಯಾನಾ
ಮಳೆಯೊಳಗೇ ನಿನ ಕಾಣುವುದೇ ನಗು ಅರಸುವುದೇ ನಿಜ ಪ್ರೀತೀನಾ